ಮಂಡ್ಯ: ರಾಜ್ಯ ರಾಜಕಾರಣದಲ್ಲಿ ಹಳೆ ಮೈಸೂರು ಭಾಗದ ನಾಯಕರಾದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಹಾಗೂ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ (N Chaluvarayaswamy) ನಡುವಿನ ರಾಜಕೀಯ ವಾಕ್ಸಮರ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಇದೀಗ ‘ಬೆಳ್ಳಂಬೆಳಗ್ಗೆ 5 ಗಂಟೆಗೆ ಬಾಗಿಲು ತಟ್ಟಿದ’ ವಿಚಾರವಾಗಿ ಇಬ್ಬರು ನಾಯಕರ ನಡುವೆ ಜಟಾಪಟಿ ಶುರುವಾಗಿದೆ.
ನನಗೆ ಟಾಸ್ಕ್ ಕೊಟ್ಟಿದ್ರು ಎಂದ ಸಚಿವ
ಇತ್ತೀಚೆಗಷ್ಟೇ ಹೆಚ್.ಡಿ. ಕುಮಾರಸ್ವಾಮಿ ಅವರು ಚಲುವರಾಯಸ್ವಾಮಿ ಅವರ ಹೆಸರೆತ್ತದೆ, ‘ಕೆಲವರು ಬೆಳಿಗ್ಗೆ 5 ಗಂಟೆಗೆ ಬಂದು ನನ್ನ ಮನೆ ಬಾಗಿಲು ತಟ್ಟಿದ್ದರು’ ಎಂದು ವ್ಯಂಗ್ಯವಾಡಿದ್ದರು. ಈ ಹೇಳಿಕೆಗೆ ಇದೀಗ ಖಾರವಾಗಿ ಪ್ರತಿಕ್ರಿಯಿಸಿರುವ ಸಚಿವ ಚಲುವರಾಯಸ್ವಾಮಿ, “ನಾನು ಅವರ ಮನೆ ಬಾಗಿಲಿಗೆ ಹೋಗಿದ್ದು ನಿಜ. ಆದರೆ ನಾನೇನು ಅವರ ಬಳಿ ಭಿಕ್ಷೆ ಬೇಡಲು ಹೋಗಿರಲಿಲ್ಲ. ನನ್ನ ಪಕ್ಷದ ವರಿಷ್ಠರು ನನಗೆ ಒಂದು ಟಾಸ್ಕ್ ಕೊಟ್ಟಿದ್ದರು. ಆ ಜವಾಬ್ದಾರಿಯನ್ನು ನಿಭಾಯಿಸುವ ಸಲುವಾಗಿ ನಾನು ಹೋಗಿ ಬಾಗಿಲು ತಟ್ಟಿದ್ದೆ,” ಎಂದು ನೇರವಾಗಿ ತಿರುಗೇಟು ನೀಡಿದ್ದಾರೆ.
ಏನಿದು 5 ಗಂಟೆಯ ರಹಸ್ಯ?
ಹಿಂದೆ 2018ರಲ್ಲಿ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾದಾಗ, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ (Congress-JDS Coalition) ರಚಿಸುವ ಅನಿವಾರ್ಯತೆ ಎದುರಾಗಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್ ಹೈಕಮಾಂಡ್ ಸೂಚನೆಯ ಮೇರೆಗೆ, ಮೈತ್ರಿ ಮಾತುಕತೆಗಾಗಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಲು ಚಲುವರಾಯಸ್ವಾಮಿ ತೆರಳಿದ್ದರು ಎನ್ನಲಾಗಿದೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು, ಆವತ್ತು ಬೆಳ್ಳಂಬೆಳಗ್ಗೆ ಮನೆಗೆ ಬಂದಿದ್ದು ವೈಯಕ್ತಿಕ ಲಾಭಕ್ಕಲ್ಲ, ಬದಲಾಗಿ ಪಕ್ಷ ನೀಡಿದ ರಾಜಕೀಯ ‘ಟಾಸ್ಕ್’ ಪೂರ್ಣಗೊಳಿಸಲು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮಂಡ್ಯ ರಾಜಕಾರಣದ ಕಾವು
ಜೆಡಿಎಸ್ನಿಂದ ಹೊರಬಂದು ಕಾಂಗ್ರೆಸ್ ಸೇರ್ಪಡೆಯಾಗಿರುವ ಚಲುವರಾಯಸ್ವಾಮಿ ಹಾಗೂ ದಳಪತಿಗಳ ನಡುವಿನ ಮುಸುಕಿನ ಗುದ್ದಾಟ ಹೊಸದೇನಲ್ಲ. ಮಂಡ್ಯ ಜಿಲ್ಲೆಯ (Mandya Politics) ಮೇಲಿನ ಹಿಡಿತ ಸಾಧಿಸಲು ಉಭಯ ನಾಯಕರು ಸದಾ ಪೈಪೋಟಿ ನಡೆಸುತ್ತಿರುತ್ತಾರೆ. ಇದೀಗ ಉಭಯ ನಾಯಕರ ನಡುವಿನ ಈ ‘ಬಾಗಿಲು ತಟ್ಟಿದ’ ವಿವಾದ ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ಭಾರಿ ಚರ್ಚೆಗೆ ಗ್ರಾಸವಾಗಿದೆ.
