ದೇಶಾದ್ಯಂತ ತೀವ್ರ ಆತಂಕ ಸೃಷ್ಟಿಸಿರುವ ಬೀದಿ ನಾಯಿಗಳ ದಾಳಿ ಮತ್ತು ಹಾವಳಿಯ ತಡೆಗೆ ಸಂಬಂಧಿಸಿದಂತೆ ಮಾನ್ಯ ಸುಪ್ರೀಂ ಕೋರ್ಟ್ ಅತ್ಯಂತ ಮಹತ್ವದ ಹಾಗೂ ಕಠಿಣ ಆದೇಶವೊಂದನ್ನು ನೀಡಿದೆ. ಸಾರ್ವಜನಿಕರ ಸುರಕ್ಷತೆಯನ್ನು ಪರಿಗಣಿಸಿ, “ಅಗತ್ಯವಿದ್ದರೆ ತೀರಾ ಆಕ್ರಮಣಕಾರಿ ಹಾಗೂ ಹುಚ್ಚು ಹಿಡಿದಿರುವ ಬೀದಿ ನಾಯಿಗಳನ್ನು ಕೊಲ್ಲಬಹುದು,” ಎಂದು ಸ್ಥಳೀಯ ಸಂಸ್ಥೆಗಳು ಮತ್ತು ಅಧಿಕಾರಿಗಳಿಗೆ ಸರ್ವೋಚ್ಚ ನ್ಯಾಯಾಲಯ ಮುಕ್ತ ಅನುಮತಿ ನೀಡಿದೆ

ಕಳೆದ ಕೆಲವು ವರ್ಷಗಳಿಂದ ಬೀದಿ ನಾಯಿಗಳ ಕಡಿತದಿಂದಾಗಿ ಅಮಾಯಕ ಮಕ್ಕಳು ಹಾಗೂ ಸಾರ್ವಜನಿಕರು ಪ್ರಾಣ ಕಳೆದುಕೊಳ್ಳುತ್ತಿರುವ ಘಟನೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೋರ್ಟ್ ನೀಡಿರುವ ಈ ಆದೇಶ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಸಾರ್ವಜನಿಕರ ಜೀವ ರಕ್ಷಣೆಗೆ ಮೊದಲ ಆದ್ಯತೆ:
ಬೀದಿ ನಾಯಿಗಳ ಹಾವಳಿ ನಿಯಂತ್ರಣ ಹಾಗೂ ಪ್ರಾಣಿ ದಯಾ ಸಂಘಟನೆಗಳ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ, ಪ್ರಾಣಿಗಳ ಹಕ್ಕುಗಳಿಗಿಂತ ಜನಸಾಮಾನ್ಯರ, ಅದರಲ್ಲೂ ಮುಖ್ಯವಾಗಿ ಮಕ್ಕಳ ಮತ್ತು ವೃದ್ಧರ ಜೀವ ರಕ್ಷಣೆ ಅತ್ಯಂತ ಪ್ರಮುಖವಾದುದ್ದು ಎಂದು ಅಭಿಪ್ರಾಯಪಟ್ಟಿದೆ ಎನ್ನಲಾಗಿದೆ. ಹುಚ್ಚು ಹಿಡಿದ ಅಥವಾ ಸಾರ್ವಜನಿಕರ ಮೇಲೆ ನಿರಂತರವಾಗಿ ಮಾರಣಾಂತಿಕ ದಾಳಿ ನಡೆಸುವ, ಯಾವುದೇ ನಿಯಂತ್ರಣಕ್ಕೆ ಸಿಗದ ಆಕ್ರಮಣಕಾರಿ ನಾಯಿಗಳನ್ನು ಗುರುತಿಸಿ, ಕಾನೂನಾತ್ಮಕ ನಿಯಮಾವಳಿಗಳ ಅಡಿಯಲ್ಲಿ ಅವುಗಳನ್ನು ಕೊಲ್ಲಲು (Culling) ಅಧಿಕಾರಿಗಳಿಗೆ ಈಗ ಅಧಿಕಾರ ಸಿಕ್ಕಂತಾಗಿದೆ.

ಸ್ಥಳೀಯ ಸಂಸ್ಥೆಗಳಿಗೆ ಸಿಕ್ಕಿತು ಕಾನೂನು ಬಲ:
ಇಲ್ಲಿಯವರೆಗೆ ಬಿಬಿಎಂಪಿ (BBMP) ಸೇರಿದಂತೆ ದೇಶದ ವಿವಿಧ ನಗರ ಹಾಗೂ ಸ್ಥಳೀಯ ಸಂಸ್ಥೆಗಳು ಬೀದಿ ನಾಯಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪ್ರಾಣಿ ಹಕ್ಕುಗಳ ಕಾಯ್ದೆಗಳು ಅಡ್ಡಿಯಾಗುತ್ತಿದ್ದವು. ಕೇವಲ ಸಂತಾನಹರಣ ಚಿಕಿತ್ಸೆ (Animal Birth Control – ABC) ಮತ್ತು ರೇಬೀಸ್ ಲಸಿಕೆ ನೀಡುವುದಕ್ಕಷ್ಟೇ ಅಧಿಕಾರಿಗಳ ಜವಾಬ್ದಾರಿ ಸೀಮಿತವಾಗಿತ್ತು. ಆದರೆ ಕೋರ್ಟ್‌ನ ಈ ಹೊಸ ಆದೇಶದಿಂದಾಗಿ, ಸಾರ್ವಜನಿಕರ ಜೀವಕ್ಕೆ ಕುತ್ತು ತರುವ ನಾಯಿಗಳ ವಿರುದ್ಧ ತಕ್ಷಣದ ಕಠಿಣ ನಿರ್ಧಾರ ತೆಗೆದುಕೊಳ್ಳಲು ಪಾಲಿಕೆಗಳಿಗೆ ಕಾನೂನಾತ್ಮಕ ಬಲ ಸಿಕ್ಕಂತಾಗಿದೆ.

ಪ್ರಾಣಿ ಪ್ರೇಮಿಗಳು ಮತ್ತು ಸಾರ್ವಜನಿಕರ ನಡುವೆ ಚರ್ಚೆ:
ಸುಪ್ರೀಂ ಕೋರ್ಟ್‌ನ ಈ ಆದೇಶವನ್ನು ನಾಯಿಗಳ ದಾಳಿಗೆ ತುತ್ತಾದ ಕುಟುಂಬಗಳು ಮತ್ತು ಜನಸಾಮಾನ್ಯರು ಸ್ವಾಗತಿಸಿದ್ದಾರೆ. “ಪ್ರತಿದಿನ ರಸ್ತೆಯಲ್ಲಿ ಓಡಾಡಲು ಭಯಪಡುವ ವಾತಾವರಣ ಇತ್ತು, ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಲಿ” ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ಆದರೆ, ಇನ್ನೊಂದೆಡೆ ಪ್ರಾಣಿ ದಯಾ ಸಂಘಟನೆಗಳು ಈ ಆದೇಶದ ದುರುಪಯೋಗವಾಗದಂತೆ ಹಾಗೂ ಕೇವಲ ಹುಚ್ಚು ನಾಯಿಗಳನ್ನು ಮಾತ್ರವೇ ಗುರುತಿಸಿ ಕ್ರಮ ಕೈಗೊಳ್ಳುವಂತೆ, ಸಾಮಾನ್ಯ ನಾಯಿಗಳಿಗೆ ತೊಂದರೆ ನೀಡದಂತೆ ನಿಗಾ ವಹಿಸಬೇಕು ಎಂದು ಒತ್ತಾಯಿಸುತ್ತಿವೆ.
ಒಟ್ಟಾರೆಯಾಗಿ, ನಿರಂತರವಾಗಿ ನನೆಗುದಿಗೆ ಬಿದ್ದಿದ್ದ ಬೀದಿ ನಾಯಿಗಳ ಸಮಸ್ಯೆಗೆ ಸುಪ್ರೀಂ ಕೋರ್ಟ್ ತಾರ್ಕಿಕ ಅಂತ್ಯ ಹಾಡಲು ಮುಂದಾಗಿದ್ದು, ಇನ್ಮುಂದೆ ನಗರಗಳ ಬೀದಿಗಳಲ್ಲಿ ಸಾರ್ವಜನಿಕರು ನಿರಾಳವಾಗಿ ಓಡಾಡಲು ಇದು ನೆರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

Leave a Reply

Your email address will not be published. Required fields are marked *