ನವದೆಹಲಿ: ಭಾರತೀಯ ರಾಜಕಾರಣದಲ್ಲಿ ಸದ್ಯ ಹೊಸದೊಂದು ಡಿಜಿಟಲ್ ಕ್ರಾಂತಿ ಸೃಷ್ಟಿಯಾಗಿದೆ. ಯಾವುದೇ ಕೋಟಿ ಕೋಟಿ ಬಜೆಟ್ ಇಲ್ಲದೆ, ಸ್ಟಾರ್ ಪ್ರಚಾರಕರಿಲ್ಲದೆ ಕೇವಲ ಐದೇ ದಿನಗಳಲ್ಲಿ ದೇಶದ ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್‌ನ ಅಧಿಕೃತ ಸೋಶಿಯಲ್ ಮೀಡಿಯಾ ಫಾಲೋವರ್ಸ್‌ಗಳ ಸಂಖ್ಯೆಯನ್ನು ಮೀರಿಸಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಇತಿಹಾಸ ಸೃಷ್ಟಿಸಿದೆ. ಯುವ ಸಮುದಾಯ ಅಥವಾ ಜೆನ್‌ಝೀ (Gen Z) ಜಾಲತಾಣಿಗರು ಒಟ್ಟಾಗಿ ಕಟ್ಟಿರುವ ಈ ‘ಕಾಕ್ರೋಚ್ ಪಕ್ಷ’ ಈಗ ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದೆ.

ಇನ್ಸ್ಟಾಗ್ರಾಮ್ ಸೇರಿದಂತೆ ಪ್ರಮುಖ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಕೇವಲ 5 ದಿನಗಳಲ್ಲಿ ಬರೋಬ್ಬರಿ 10 ಮಿಲಿಯನ್‌ಗೂ ಹೆಚ್ಚು ಫಾಲೋವರ್ಸ್ ಗಳಿಸುವ ಮೂಲಕ ಈ ಕಾಕ್ರೋಚ್ ಪಾರ್ಟಿ ಸದ್ಯ ದೇಶದ ನಂಬರ್ 1 ಆನ್‌ಲೈನ್ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದೆ.

ಏನಿದು ಕಾಕ್ರೋಚ್ ಜನತಾ ಪಾರ್ಟಿ? ಇದರ ಹಿನ್ನೆಲೆ ಏನು?

ಇದು ಕೇವಲ ಒಂದು ತಮಾಷೆಯ ಸೋಷಿಯಲ್ ಮೀಡಿಯಾ ಟ್ರೆಂಡ್ ಅಂದುಕೊಂಡರೆ ತಪ್ಪು. ಇದರ ಹಿಂದೆ ದೇಶದ ಯುವಕರ ನಿರುದ್ಯೋಗದ ಆಕ್ರೋಶ ಅಡಗಿದೆ. ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಅವರು ದೇಶದ ನಿರುದ್ಯೋಗಿ ಯುವಕರನ್ನು “ಕಾಕ್ರೋಚ್ (ಜಿರಳೆಗಳು) ಮತ್ತು ಸಮಾಜದ ಪರಾವಲಂಬಿಗಳು” ಎಂದು ಹೋಲಿಸಿ ಹೇಳಿಕೆ ನೀಡಿದ್ದಾರೆ ಎನ್ನಲಾದ ವರದಿಗಳು ಹರಿದಾಡಿದ್ದವು. ಈ ವಿವಾದಾತ್ಮಕ ಹೇಳಿಕೆಗೆ ಪ್ರತಿಯಾಗಿ ಯುವ ಜನಾಂಗ ಡಿಜಿಟಲ್ ರೂಪದಲ್ಲಿ ಪ್ರತಿಭಟಿಸಲು ಈ ವಿಶಿಷ್ಟ ಮಾರ್ಗವನ್ನು ಕಂಡುಕೊಂಡಿದೆ.

ಆಮ್ ಆದ್ಮಿ ಪಕ್ಷದ ಮಾಜಿ ರಾಜಕೀಯ ತಂತ್ರಜ್ಞ ಹಾಗೂ ಬೋಸ್ಟನ್ ಯೂನಿವರ್ಸಿಟಿಯ ವಿದ್ಯಾರ್ಥಿಯಾಗಿರುವ 30 ವರ್ಷದ ಅಭಿಜೀತ್ ದೀಪ್ಕೆ (Abhijeet Dipke) ಮೇ 16 ರಂದು ಈ ‘ಕಾಕ್ರೋಚ್ ಜನತಾ ಪಾರ್ಟಿ’ಯನ್ನು ಸಾಮಾಜಿಕ ಜಾಲತಾಣದಲ್ಲಿ ಆರಂಭಿಸಿದರು. “ಮುಖ್ಯ ನ್ಯಾಯಮೂರ್ತಿಗಳು ನಮ್ಮನ್ನು ಜಿರಳೆಗಳು ಎಂದಿದ್ದಾರೆ, ಹೌದು ನಾವು ಜಿರಳೆಗಳೇ” ಎಂದು ವ್ಯಂಗ್ಯವಾಗಿ ಸ್ವೀಕರಿಸಿದ ಯುವಕರು ಈ ಅಭಿಯಾನವನ್ನು ದೇಶವ್ಯಾಪಿ ವಿಸ್ತರಿಸಿದ್ದಾರೆ.

ಆನ್‌ಲೈನ್‌ನಿಂದ ಆಫ್‌ಲೈನ್‌ಗೆ ಜಿರಳೆಗಳ ಆರ್ಭಟ!

ಕೇವಲ ಸೋಷಿಯಲ್ ಮೀಡಿಯಾ ಫಾಲೋ ಮಾಡುವುದಷ್ಟೇ ಅಲ್ಲದೇ, ಈಗಾಗಲೇ 3.5 ಲಕ್ಷಕ್ಕೂ ಹೆಚ್ಚು ಯುವಕರು ಈ ಪಕ್ಷದ ಆನ್‌ಲೈನ್ ಸದಸ್ಯತ್ವ ಪಡೆದಿದ್ದಾರೆ. ವಿಶೇಷವೆಂದರೆ ಈ ಪಕ್ಷದ ಸದಸ್ಯರಾಗಲು “ಬಲಾತ್ಕಾರವಾಗಿ, ಸ್ವಇಚ್ಛೆಯಿಂದ ಅಥವಾ ತತ್ವದ ಆಧಾರದ ಮೇಲೆ ನಿರುದ್ಯೋಗಿಯಾಗಿರಬೇಕು” ಎಂಬ ತಮಾಷೆಯ ನಿಯಮವನ್ನು ಇಡಲಾಗಿದೆ.

ಈಗಾಗಲೇ ದೇಶದ ಪ್ರಮುಖ ನಗರಗಳಲ್ಲಿ ಯುವಕರು ಕಾಕ್ರೋಚ್ ವೇಷಭೂಷಣಗಳನ್ನು ಧರಿಸಿ ರಸ್ತೆಗಿಳಿದಿದ್ದಾರೆ. ನದಿಗಳನ್ನು ಸ್ವಚ್ಛಗೊಳಿಸುವುದು, ಸಾರ್ವಜನಿಕ ಸ್ಥಳಗಳ ಸ್ವಚ್ಛತಾ ಆಂದೋಲನ ನಡೆಸುವುದು ಹಾಗೂ ವಿನೂತನ ಮಾದರಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ಸಾರ್ವಜನಿಕರ ಗಮನ ಸೆಳೆಯುತ್ತಿದ್ದಾರೆ. ಇಷ್ಟೇ ಅಲ್ಲದೆ ಬಿಹಾರದ ಬಂಕಿಪುರ ವಿಧಾನಸಭಾ ಉಪಚುನಾವಣೆಯಲ್ಲಿ ಈ ಪಕ್ಷದ ಬೆಂಬಲಿಗರು ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸಲು ಗಂಭೀರ ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಆರ್ ಟಿಐ ಮತ್ತು ಪಾರದರ್ಶಕತೆಯ ಪ್ರಣಾಳಿಕೆ

ಈ ವಿಡಂಬನಾತ್ಮಕ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಹಲವು ಗಂಭೀರ ವಿಚಾರಗಳನ್ನು ಪ್ರಸ್ತಾಪಿಸಿದೆ. ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ, ಯಾವುದೇ ಅನಾಮಧೇಯ ದೇಣಿಗೆ ಅಥವಾ ಎಲೆಕ್ಟೋರಲ್ ಬಾಂಡ್‌ಗಳನ್ನು ಸ್ವೀಕರಿಸುವುದಿಲ್ಲ ಮತ್ತು ಈ ಪಕ್ಷವು ಸಂಪೂರ್ಣವಾಗಿ ಆರ್ ಟಿಐ (ಮಾಹಿತಿ ಹಕ್ಕು ಕಾಯ್ದೆ) ವ್ಯಾಪ್ತಿಗೆ ಒಳಪಡುತ್ತದೆ ಎಂದು ಘೋಷಿಸಿದೆ.

ಸದ್ಯ ಇನ್ಸ್ಟಾಗ್ರಾಮ್‌ನಲ್ಲಿ ದೇಶದ ಬಲಿಷ್ಠ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಖಾತೆಗಳಿಗಿಂತಲೂ ಅತಿ ಹೆಚ್ಚು ಫಾಲೋವರ್ಸ್ ಹೊಂದುವ ಮೂಲಕ ಭಾರತೀಯ ಡಿಜಿಟಲ್ ರಾಜಕಾರಣದಲ್ಲಿ ಜೆನ್‌ಝೀ ಯುವಕರು ಹೊಸ ಭಾಷ್ಯ ಬರೆಯುತ್ತಿದ್ದಾರೆ.

  • ಯುವ ಆಕ್ರೋಶದ ಸಂಕೇತ: ಸಾಂಪ್ರದಾಯಿಕ ಪ್ರತಿಭಟನೆಗಳಿಗಿಂತ ಭಿನ್ನವಾಗಿ ಇಂದಿನ ಯುವ ಪೀಳಿಗೆ (Gen Z) ಮೀಮ್ಸ್ ಹಾಗೂ ಸ್ಯಾಟೈರ್ (ವ್ಯಂಗ್ಯ) ಮೂಲಕ ವ್ಯವಸ್ಥೆಯ ವಿರುದ್ಧ ಹೇಗೆ ದಂಗೆ ಏಳಬಹುದು ಎಂಬುದಕ್ಕೆ ಸಿಜೆಪಿ ಅತ್ಯುತ್ತಮ ಉದಾಹರಣೆ.
  • ನಿರುದ್ಯೋಗದ ಗಂಭೀರತೆ: ಭಾರತದಲ್ಲಿ ಪದವೀಧರ ನಿರುದ್ಯೋಗ ದರ ಹೆಚ್ಚುತ್ತಿರುವುದರ ವಿರುದ್ಧ ಯುವ ಸಮೂಹ ಸದ್ದಿಲ್ಲದೆ ಒಂದಾಗುತ್ತಿರುವುದನ್ನು ಇದು ತೋರಿಸುತ್ತದೆ. ತಮಾಷೆಯಾಗಿ ಆರಂಭವಾದರೂ ಇದರ ಆಳದಲ್ಲಿ ನಿರುದ್ಯೋಗದ ನೋವಿದೆ.

Leave a Reply

Your email address will not be published. Required fields are marked *