ಬಳ್ಳಾರಿ: ಗಣಿ ನಾಡು ಬಳ್ಳಾರಿಯ ರಾಜಕೀಯ ಅಖಾಡದಲ್ಲಿ ನಾಯಕರ ನಡುವಿನ ವಾಕ್ಸಮರ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಮಾಜಿ ಸಚಿವ ಬಿ. ನಾಗೇಂದ್ರ ಮತ್ತು ಬಿಜೆಪಿ ನಾಯಕ ಜನಾರ್ದನ ರೆಡ್ಡಿ ನಡುವಿನ ಜಟಾಪಟಿ ಮತ್ತೊಂದು ಹಂತ ತಲುಪಿದ್ದು, ಇದೀಗ ರೆಡ್ಡಿ ಅವರು ನಾಗೇಂದ್ರ ಹಾಗೂ ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೆ ನೇರ ಹಾಗೂ ಬಹಿರಂಗ ಸವಾಲೊಂದನ್ನು ಎಸೆದಿದ್ದಾರೆ.

“ನಿಮಗೆ ಹಾಗೂ ನಿಮ್ಮ ಪಕ್ಷಕ್ಕೆ ನಿಜಕ್ಕೂ ತಾಕತ್ತು ಇದ್ದರೆ, ದಮ್ ಇದ್ದರೆ ನಿಮ್ಮ 10 ಶಾಸಕರಿಂದ ರಾಜೀನಾಮೆ ಕೊಡಿಸಿ. ನಾಳೆಯೇ ಚುನಾವಣೆ ಎದುರಾದರೂ ನಾವು ಸಿದ್ಧರಿದ್ದೇವೆ,” ಎಂದು ಜನಾರ್ದನ ರೆಡ್ಡಿ ಗುಡುಗಿದ್ದಾರೆ.

ಚುನಾವಣಾ ಸವಾಲು: ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಹಾಗೂ ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಮತ್ತು ಬಿ. ನಾಗೇಂದ್ರ ಅವರ ಹೇಳಿಕೆಗಳಿಗೆ ತಿರುಗೇಟು ನೀಡಿದ ರೆಡ್ಡಿ, ವಿರೋಧ ಪಕ್ಷವಾಗಿ ಬಿಜೆಪಿ ಯಾವುದೇ ಚುನಾವಣೆ ಎದುರಿಸಲು ಸಜ್ಜಾಗಿದೆ ಎಂಬ ಸಂದೇಶ ರವಾನಿಸಿದ್ದಾರೆ. “ಜನರ ಒಲವು ಈಗಲೂ ನಮ್ಮ ಪರವಾಗಿಯೇ ಇದೆ. ನೀವು ಅಧಿಕಾರದಲ್ಲಿದ್ದೀರಿ ಎಂಬ ಅಹಂಕಾರ ಬೇಡ, ಶಾಸಕರಿಂದ ರಾಜೀನಾಮೆ ಕೊಡಿಸಿ ಮರುಚುನಾವಣೆಗೆ ಬನ್ನಿ, ಯಾರು ಗೆಲ್ಲುತ್ತಾರೆಂದು ನೋಡೋಣ,” ಎಂದು ಸವಾಲು ಹಾಕಿದ್ದಾರೆ.

ಬಳ್ಳಾರಿಯಲ್ಲಿ ಹೆಚ್ಚಿದ ರಾಜಕೀಯ ಕಾವು: ವಾಲ್ಮೀಕಿ ನಿಗಮದ ಹಗರಣದ ಬಳಿಕ ಸಚಿವ ಸ್ಥಾನ ಕಳೆದುಕೊಂಡಿರುವ ಬಿ. ನಾಗೇಂದ್ರ ಅವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ನಿರಂತರವಾಗಿ ಬಿಜೆಪಿ ನಾಯಕರ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ. ಇದಕ್ಕೆ ಅಷ್ಟೇ ಕಟುವಾಗಿ ಪ್ರತಿಕ್ರಿಯಿಸುತ್ತಿರುವ ಜನಾರ್ದನ ರೆಡ್ಡಿ, ಕಾಂಗ್ರೆಸ್ ನಾಯಕರ ನೈತಿಕತೆಯನ್ನು ಪ್ರಶ್ನಿಸುತ್ತಿದ್ದಾರೆ. ಉಭಯ ನಾಯಕರ ನಡುವಿನ ಈ ಸವಾಲು-ಪ್ರತಿಸವಾಲುಗಳು ಬಳ್ಳಾರಿ ಹಾಗೂ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.

Leave a Reply

Your email address will not be published. Required fields are marked *