ಬೆಂಗಳೂರು: ಫೆಬ್ರವರಿ 28 ರಂದು ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಏಕಕಾಲದಲ್ಲಿ ವೈಜ್ಞಾನಿಕ ಮನೋಭಾವನೆ ಹಾಗೂ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವಂತೆ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿ ಮೂಲಭೂತ ಕರ್ತವ್ಯವನ್ನು ಪಾಲಿಸುವ ಮೂಲಕ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲು ಆದೇಶ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸುವುದು ಕಡ್ಡಾಯವೆಂದು ಆದೇಶಿಸಲಾಗಿದೆ.
ಉದ್ದೇಶ: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ವಿಚಾರಧಾರೆ ಮೂಡಿಸಲು ಮತ್ತು ಮೂಢನಂಬಿಕೆಗಳನ್ನು ಹೋಗಲಾಡಿಸಲು ರಾಜ್ಯ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ.
ಸಂವಿಧಾನದ ಆಶಯ: ಸಂವಿಧಾನದ 51 A (h) ವಿಧಿಯ ಅನ್ವಯ ವೈಜ್ಞಾನಿಕ ಮನೋಭಾವ ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂಬುದನ್ನು ಇದು ನೆನಪಿಸುತ್ತದೆ.
ಅನುಷ್ಠಾನ: ಫೆಬ್ರವರಿ 28ರ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಂದು ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಏಕಕಾಲಕ್ಕೆ ಈ ಪ್ರತಿಜ್ಞಾ ವಿಧಿ ಸ್ವೀಕರಿಸುವುದು ಕಡ್ಡಾಯವಾಗಿದೆ.
ಪ್ರತಿಜ್ಞಾ ವಿಧಿಯ ಪಠ್ಯ ಹೀಗಿದೆ:
ನಾನು ಭಾರತೀಯ ಸಂವಿಧಾನದ 51 A (h) ವಿಧಿಯ ಅನ್ವಯ ವೈಜ್ಞಾನಿಕ ಮನೋಭಾವನೆ ಮತ್ತು ವೈಚಾರಿಕತೆಯನ್ನು ಬೆಳೆಸಿಕೊಳ್ಳುತ್ತೇನೆ. ನಾನು ಪ್ರಶ್ನೆ ಮಾಡದೇ ಯಾವುದೇ ತರ್ಕ ಒಪ್ಪುವುದಿಲ್ಲ ಹಾಗೂ ಸಂವಿಧಾನದ ಮೂಲಭೂತ ಕರ್ತವ್ಯದ ಆಶಯದಂತೆ ಮೌಢ್ಯತೆ ಮತ್ತು ಅಂಧಕಾರವನ್ನು ನಿರ್ಮೂಲನೆ ಮಾಡಿ ಜೀವ ಜಗತ್ತಿಗೆ ಪೂರಕವಾದ ಬದುಕನ್ನು ರೂಪಿಸಿಕೊಳ್ಳುತ್ತೇನೆಂದು ಈ ಮೂಲಕ ರಾಷ್ಟ್ರೀಯ ವಿಜ್ಞಾನ ದಿನದಂದು ಪ್ರತಿಜ್ಞೆ ಮಾಡುತ್ತೇನೆ.
ಜೈ ಭಾರತ, ಜೈ ಕರ್ನಾಟಕ ಜೈ ಸಂವಿಧಾನ, ಜೈ ವಿಜ್ಞಾನ
