ಬೆಂಗಳೂರು: ರಾಜ್ಯಾದ್ಯಂತ ಸಂಚಲನ ಮೂಡಿಸಿರುವ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ನಟ ದರ್ಶನ್ ಹಾಗೂ ಇತರ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಭಾರಿ ಹಿನ್ನಡೆಯಾಗಿದೆ. ಪ್ರಕರಣದಲ್ಲಿ ಕೆಲವು ಆರೋಪಿಗಳು ‘ಮಾಫಿ ಸಾಕ್ಷಿ’ (Approver) ಯಾಗಲು ಸಲ್ಲಿಸಿರುವ ಅರ್ಜಿಯ ವಿಚಾರಣೆಯಲ್ಲಿ, ದರ್ಶನ್ ಸೇರಿದಂತೆ ಉಳಿದ ಆರೋಪಿಗಳ ವಾದವನ್ನು ಆಲಿಸುವ ಅಗತ್ಯವಿಲ್ಲ ಎಂದು ಕೋರ್ಟ್ ಮಹತ್ವದ ಆದೇಶ ನೀಡಿದೆ.

ಕೋರ್ಟ್ ಹೇಳಿದ್ದೇನು? ಪ್ರಕರಣದ ನಾಲ್ವರು ಆರೋಪಿಗಳು ತಾವು ಮಾಫಿ ಸಾಕ್ಷಿಯಾಗಲು ಸಿದ್ಧರಿರುವುದಾಗಿ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ವೇಳೆ, ನಟ ದರ್ಶನ್ ಮತ್ತು ಇತರ ಆರೋಪಿಗಳ ಪರ ವಕೀಲರು ಆಕ್ಷೇಪಣೆ ಸಲ್ಲಿಸಲು ಮುಂದಾಗಿದ್ದರು. ಅಲ್ಲದೆ, ತಮ್ಮ ವಾದವನ್ನೂ ಆಲಿಸಬೇಕು ಎಂದು ಕೋರಿದ್ದರು.

ಆದರೆ, ಈ ಮನವಿಯನ್ನು ಕಟ್ಟುನಿಟ್ಟಾಗಿ ತಳ್ಳಿಹಾಕಿರುವ ನ್ಯಾಯಾಧೀಶರು, “ಸಹ-ಆರೋಪಿಯೊಬ್ಬ ಮಾಫಿ ಸಾಕ್ಷಿಯಾಗಲು ಬಯಸಿದಾಗ ಆ ಕುರಿತು ತೀರ್ಮಾನ ಕೈಗೊಳ್ಳುವ ಸಂಪೂರ್ಣ ಅಧಿಕಾರ ನ್ಯಾಯಾಲಯಕ್ಕಿರುತ್ತದೆ. ಈ ಪ್ರಕ್ರಿಯೆಯಲ್ಲಿ ಉಳಿದ ಆರೋಪಿಗಳು ಮಧ್ಯಪ್ರವೇಶಿಸುವ ಅಥವಾ ಆಕ್ಷೇಪಣೆ ಎತ್ತುವ ಯಾವುದೇ ಕಾನೂನಾತ್ಮಕ ಅವಕಾಶವಿಲ್ಲ” ಎಂದು ಸ್ಪಷ್ಟಪಡಿಸಿದೆ.

ದರ್ಶನ್ ಗ್ಯಾಂಗ್‌ಗೆ ಹೆಚ್ಚಿದ ಸಂಕಷ್ಟ: ಸಾಮಾನ್ಯವಾಗಿ ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳೇ ಮಾಫಿ ಸಾಕ್ಷಿಯಾಗಿ ಬದಲಾದರೆ, ಅದು ಪ್ರಾಸಿಕ್ಯೂಷನ್ (ಪೊಲೀಸರ) ಪಾಲಿಗೆ ಬ್ರಹ್ಮಾಸ್ತ್ರವಾಗಿ ಕೆಲಸ ಮಾಡುತ್ತದೆ. ಇದೀಗ ನ್ಯಾಯಾಲಯವು ದರ್ಶನ್ ಪರ ವಕೀಲರ ಆಕ್ಷೇಪಣೆಯನ್ನು ತಿರಸ್ಕರಿಸಿರುವುದರಿಂದ, ಮಾಫಿ ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಳ್ಳಲು ಪೊಲೀಸರಿಗೆ ದಾರಿ ಸುಗಮವಾಗಿದೆ.

ತಮ್ಮದೇ ಗ್ಯಾಂಗ್‌ನಲ್ಲಿದ್ದವರು ಈಗ ತನಿಖಾಧಿಕಾರಿಗಳ ಪರವಾಗಿ ಸಾಕ್ಷ್ಯ ನುಡಿಯಲು ಮುಂದಾಗಿರುವುದು ನಟ ದರ್ಶನ್ ಹಾಗೂ ಪ್ರಕರಣದ ಇತರ ಪ್ರಮುಖ ಆರೋಪಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಮುಂದಿನ ದಿನಗಳಲ್ಲಿ ಇವರ ಕಾನೂನು ಸಂಕಷ್ಟ ಮತ್ತಷ್ಟು ಬಿಗಿಯಾಗುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ.

Leave a Reply

Your email address will not be published. Required fields are marked *